
ರಣಜಿ ಟ್ರೋಫಿ: ದಾವಣಗೆರೆ ಜೋಡಿಗೆ ‘ಮುಖ್ಯ ಕೋಚ್’ ಹೊಣೆ
ಬೆಂಗಳೂರು: ಒಂದು ದಶಕದ ಹಿಂದೆ ಕರ್ನಾಟಕವು ರಣಜಿ ಟ್ರೋಫಿ ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ದಾವಣಗೆರೆಯ ಇಬ್ಬರು ಆಟಗಾರರು ಈಗ ರಾಜ್ಯದ ಸೀನಿಯರ್ ಮತ್ತು 23 ವರ್ಷದೊಳಗಿನವರ ತಂಡಗಳ ಮುಖ್ಯ ಕೋಚ್ ಹುದ್ದೆಗಳಿಗೆ ನೇಮಕವಾಗಿದ್ದಾರೆ.
2013–14 ಹಾಗೂ 2014–15ರಲ್ಲಿ ‘ಡಬಲ್ ಟ್ರಿಪಲ್’ ಸಾಧನೆ ಮಾಡಿದ್ದ ಕರ್ನಾಟಕ ತಂಡದ ನಾಯಕರಾಗಿದ್ದ ಆರ್. ವಿನಯಕುಮಾರ್ ಈಗ ಸೀನಿಯರ್ ಬಳಗಕ್ಕೆ ಹಾಗೂ ಬ್ಯಾಟರ್ ಗಣೇಶ್ ಸತೀಶ್ ಅವರು 23 ವರ್ಷದೊಳಗಿನ ಬಳಗಕ್ಕೆ ಮುಖ್ಯ ಕೋಚ್ ಆಗಿದ್ದಾರೆ.
ಹೋದ ವಾರವೇ ವಿನಯ್ ಅವರು ಕರ್ನಾಟಕ ತಂಡದ ಹೊಸ ಕೋಚ್ ಆಗಿರುವ ಕುರಿತು ವರದಿಯಾಗಿತ್ತು. ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕೃತ ಪ್ರಕಟಣೆ ನೀಡಿದ್ದು ಪುರುಷರ, ಮಹಿಳೆಯರ ಹಾಗೂ ವಿವಿಧ ವಯೋಮಿತಿಯ ತಂಡಗಳ ಮುಖ್ಯ ಕೋಚ್ ಮತ್ತು ಸಹಾಯಕ ಕೋಚ್ ನೇಮಕ ಮಾಡಿದೆ.
ವಿನಯ್ ಬಳಗದಲ್ಲಿ ಬೆಳಗಾವಿಯ ದೀಪಕ್ ಚೌಗುಲೆ ಅವರು ಫೀಲ್ಡಿಂಗ್ ಕೋಚ್ ಆಗಿದ್ದಾರೆ. 19 ವರ್ಷದೊಳಗಿನವರ ತಂಡಕ್ಕೆ ಮಾಜಿ ಆಟಗಾರ ಕುನಾಲ್ ಕಪೂರ್ ಹಾಗೂ 16 ವರ್ಷದೊಳಗಿ ನವರ ತಂಡಕ್ಕೆ ಮೈಸೂರಿನ ಆದಿತ್ಯ ಬಿ ಸಾಗರ್ ಅವರು ಮುಖ್ಯ ತರಬೇತುದಾರರಾಗಿದ್ದಾರೆ.
‘ಕರ್ನಾಟಕ ತಂಡದ ಆಟಗಾರ ಮತ್ತು ನಾಯಕನಾಗಿದ್ದೆ. ಇದೀಗ ಮುಖ್ಯ ಕೋಚ್ ಆಗಿರುವೆ. ಇದು ನನಗೆ ಲಭಿಸಿರುವ ವಿಶೇಷ ಗೌರವ. ಆಟಗಾರ ನಾಗಿದ್ದ ಸಂದರ್ಭದಲ್ಲಿ ಉತ್ತಮ ಸಾಧನೆಗಳನ್ನು ದಾಖಲಿಸಿದ್ದೇವೆ. ಇದೀಗ ಕೋಚ್ ಆಗಿ ವಿಭಿನ್ನ ರೀತಿಯ ಕಾರ್ಯಶೈಲಿ ಇದೆ. ಅದನ್ನು ನಿಭಾಯಸುವ ವಿಶ್ವಾಶವಿದೆ. ಉತ್ತಮ ಫಲಿತಾಂಶಗಳನ್ನು ನೀಡುವ ಗುರಿ ಇದೆ. ಈ ಅವಕಾಶ ಕಲ್ಪಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆಭಾರಿಯಾಗಿರುವೆ‘ ಎಂದು ವಿನಯ ಕುಮಾರ್ ‘ಪ್ರಜಾವಾಣಿ’ಗೆ ಹೇಳಿದರು.
ಮಹಿಳೆಯರ ಸೀನಿಯರ್ ಹಾಗೂ 23 ವರ್ಷದೊಳಗಿನ ತಂಡಗಳಿಗೆ ಎಸ್.ಎನ್. ಅಮಿತ್ ಹಾಗೂ 14 ವರ್ಷದೊಳಗಿನ ಬಾಲಕರ ಮತ್ತು 15 ವರ್ಷದೊಳಗಿನ ಬಾಲಕಿಯರ ತಂಡಗಳಿಗೆ ಎಂ. ಗುರುಪ್ರಸಾದ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-51-1475542297