
ಭದ್ರತೆಗೆ ನಿಯೋಜನೆಗೊಂಡಿರುವ ಪಿಎಸ್ಐಯಿಂದಲೇ ದೀಪ್ಕೆಗೆ ಕಾಟ!
ಛತ್ರಪತಿ ಸಾಂಭಾಜಿನಗರ: ತಮ್ಮ ಮನೆ ಮುಂದೆ ಭದ್ರತೆಗಾಗಿ ನೇಮಕಗೊಂಡಿರುವ ಪಿಎಸ್ಐ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿರುವ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ, ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.
ತಮ್ಮ ಭೇಟಿಗೆ ಬರುವ ಜನರಿಗೆ ಪಿಎಸ್ಐ ನಿರ್ಬಂಧ ಹೇರುತ್ತಿದ್ದಾರೆ. ಅವರ ಜೊತೆ ಕಠೋರವಾಗಿ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಅವರ ಮೇಲ್ವಿಚಾರಣೆ ನಡೆಸಲು ಯತ್ನಿಸುತ್ತಿದ್ದಾರೆ ಎಂದು ದೀಪ್ಕೆ ಆರೋಪಿಸಿದ್ದಾರೆ.
ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ದೀಪ್ಕೆ ಅವರ ಮನೆ ಬಳಿ ಜನಸಂದಣಿ ನಿರ್ವಹಿಸಲು ಭದ್ರತೆ ಒದಗಿಸಲಾಗಿದೆ.
ಸಿಜೆಪಿ ಸಂಸ್ಥಾಪಕರು ತಮ್ಮ ನಿವಾಸದ ಬಳಿ ನಿಯೋಜನೆಗೊಂಡಿರುವ ಪಿಎಸ್ಐ ಜೊತೆ ಮಾತಿನ ಚಕಮಕಿಯಲ್ಲಿ ತೊಡಗಿರುವ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡಿದೆ.
‘ನಾನೇ ಆಹ್ವಾನ ನೀಡಿರುವ ಜನರನ್ನು ನನ್ನ ಮನೆಯೊಳಗೆ ಬರಲು ಅವಕಾಶ ನೀಡದಿರುವುದಕ್ಕೆ ಏನು ಕಾರಣ? ದೆಹಲಿ ಪೊಲೀಸರ ರೀತಿ ಏಕೆ ವರ್ತಿಸುದ್ದೀರಿ? ನಿಮ್ಮನ್ನು ಮೊದಲ ದಿನದಿಂದಲೂ ಗಮನಿಸುತ್ತಿದ್ದೇನೆ. ನಾನು ಯಾರ ಜೊತೆ ಮಾತನಾಡಬೇಕು ಮತ್ತು ಯಾರ ಜೊತೆ ಮಾತನಾಡಬಾರದು ಎಂಬುದನ್ನು ನೀವು ನಿರ್ಧರಿಸಲಾಗದು. ನನ್ನ ಮನೆಯಿಂದ ಹೊರಗೆ ಹೋಗಿ. ನಿಮ್ಮನ್ನು ನನ್ನ ಮನೆಯಲ್ಲಿ ಇರಿಸಿಕೊಳ್ಳಲು ನನಗೆ ಇಷ್ಟವಿಲ್ಲ’ ಎಂದು ಕಿಡಿಕಾರಿದ್ದಾರೆ.
ಮತ್ತೊಂದು ವಿಡಿಯೊದಲ್ಲಿ ದೀಪ್ಕೆ, ಪಿಎಸ್ಐ ವರ್ತನೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗೆ ಫೋನ್ ಮೂಲಕ ದೂರುತ್ತಿರುವುದು ಕಂಡುಬಂದಿದೆ.
‘ಸುರೇಶ್ ಎಂಬ ಹೆಸರಿನ ಪಿಎಸ್ಐ ಇಲ್ಲಿಗೆ ಬಂದಿದ್ದಾರೆ. ನನ್ನನ್ನು ಭೇಟಿಯಾಗಲು ಬರುವವರೊಂದಿಗೆ ಅವರು ಬಹಳ ಒರಟಾಗಿ ವರ್ತಿಸುತ್ತಿದ್ದಾರೆ. ಜನರಿಗೆ ಹೊರಹೋಗುವಂತೆ ಹೇಳುತ್ತಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆಯೇ? ನನಗೆ ಅವರು ಬೇಡ, ಅವರನ್ನು ಇಲ್ಲಿಂದ ತೆಗೆದುಹಾಕಿ’ ಎಂದು ಸಿಜೆಪಿ ಸಂಸ್ಥಾಪಕರು ಪೊಲೀಸ್ ಅಧಿಕಾರಿಗೆ ಹೇಳುತ್ತಿರುವುದು ಕಂಡುಬಂದಿದೆ.
ರಾಜ್ಯ ಸಿಐಡಿ ಸಿಬ್ಬಂದಿಯೊಬ್ಬರು ತಮ್ಮ ಮನೆ ಮುಂದೆ ಮಫ್ತಿಯಲ್ಲಿ ಓಡಾಡುತ್ತಿದ್ದಾರೆ ಎಂದು ಅದೇ ಕರೆಯಲ್ಲಿ ದೀಪ್ಕೆ ದೂರಿದ್ದಾರೆ.