
ನನ್ನನ್ನು ಕೊಂಡುಕೊಳ್ಳುವವರು ಇನ್ನೂ ಹುಟ್ಟಿಲ್ಲ: ಕುಮಾರಸ್ವಾಮಿ
ಮೈಸೂರು: ‘ನನ್ನನ್ನು ಯಾರೂ ಕೊಂಡುಕೊಳ್ಳಲು ಆಗುವುದಿಲ್ಲ. ಅಂಥವರು ಇನ್ನೂ ಈ ರಾಜ್ಯದಲ್ಲಿ ಹುಟ್ಟಿಲ್ಲ. ನನ್ನ ಧ್ವನಿಯನ್ನು ನಿಲ್ಲಿಸುವುದಕ್ಕೂ ಆಗುವುದಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
‘ಡಿಎಲ್ಎಫ್ ಕಂಪನಿಯಿಂದ ಕಿಕ್ಬ್ಯಾಕ್ ಪಡೆದಿದ್ದಾರೆ’ ಎಂಬ ತಮ್ಮ ವಿರುದ್ಧದ ಆರೋಪದ ಬಗ್ಗೆ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗೂ, ಪ್ರಧಾನಿಯಾಗಲು ಹೊರಟಿರುವ ದೆಹಲಿಯ ವ್ಯಕ್ತಿಗೂ– ಡಿಎಲ್ಎಫ್ಗೂ ಸಂಬಂಧವೇನು ಎಂಬುದನ್ನು ಹೇಳಲಿ, ಆಗ ಸತ್ಯವೆಲ್ಲವೂ ಗೊತ್ತಾಗುತ್ತವೆ. ರಾಜ್ಯದಲ್ಲಿ ಸರ್ಕಾರ ಅವರದೇ ಇದೆಯಲ್ಲವೇ ತನಿಖೆ ಮಾಡಿಸಲಿ’ ಎಂದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ, ಸಿಂಗಪುರದ ಒಂದು ಕಂಪನಿ ಬೆಂಗಳೂರಿನ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ನಿರ್ವಹಿಸಲು ತಯಾರಿರುವುದಾಗಿ ಹೇಳಿತ್ತು. ಅದು ಸಿಂಗಪುರದಲ್ಲಿ ಹೇಗೆ ಅನುಷ್ಠಾನಗೊಳಿಸಿದೆ ಎಂಬುದನ್ನು ನೋಡಲೆಂದು ನಾನು ಅಧಿಕಾರಿಗಳ ನಿಯೋಗ ಕರೆದೊಯ್ದಿದ್ದೆ. ಆಗ ಈ ‘ನೈಸ್’ ವ್ಯಕ್ತಿಯೂ ಬಂದಿದ್ದರು, ಅವರಿಗೆ ಏನು ಹೇಳಿ ಕಳಿಸಿದೆ ಎಂಬುದನ್ನು ಕೇಳಲಿ. ಲಾಟರಿ ನಿಷೇಧಿಸುವಾಗ, ತಮಿಳುನಾಡಿನಿಂದ ಬ್ಯಾಗ್ ಹಿಡಿದುಕೊಂಡು ಬಂದು ನನ್ನಿಂದ ಉಗಿಸಿಕೊಂಡವರು ಯಾರು?’ ಎಂದು ಕೇಳಿದರು.
‘ಇವರೆಲ್ಲರೂ, ದಲಿತರ ಭೂಮಿ ಪಡೆದುಕೊಳ್ಳಲು ಯಾವ್ಯಾವ ದಾಖಲೆಗಳನ್ನು ಸೃಷ್ಟಿಸಿದ್ದಾರೆ, ಏನೇನು ವ್ಯಾಪಾರ ಮಾಡುತ್ತಾರೆ ಎನ್ನುವುದೆಲ್ಲವೂ ನನಗೆ ಗೊತ್ತಿಲ್ಲವೇ?’ ಎಂದರು.
‘ರಾಜ್ಯದಲ್ಲಿ ವಿರೋಧಪಕ್ಷಗಳು ವಿಫಲವಾಗಿಲ್ಲ. ಅವ್ಯವಹಾರ, ಅಕ್ರಮಗಳ ಬಗ್ಗೆ ನಾವು ಮಾತಾಡಿದರೂ ಗೌರವ ಕೊಡದೇ ಹಣ, ಅಧಿಕಾರದ ಮದದಲ್ಲಿ ಸರ್ಕಾರ ಹೋಗುತ್ತಿದೆ’ ಎಂದು ದೂರಿದರು.
ಆ ಸಮಿತಿ ವರದಿ ಏನಾಯಿತು?
‘ಬಿಡದಿ ಟೌನ್ಶಿಪ್ ವಿಚಾರದಲ್ಲಿ ಮತ್ತೊಂದು ಸಮಿತಿಯಿಂದ ವರದಿ ಪಡೆಯಲು ಹೊರಟಿರುವುದು ನಗೆಪಾಟಲಲ್ಲದೇ ಬೇರೇನೂ ಅಲ್ಲ. 2006ರಲ್ಲಿ ಸದನ ಸಮಿತಿಯೇ ಸತ್ಯಶೋಧನಾ ವರದಿ ಕೊಟ್ಟಿದೆ, ಅದೇನಾಯಿತು? ಈಗೇಕೆ ಸಮಿತಿ ರಚಿಸಿದ್ದೀರಿ? ಆ ಸಮಿತಿಯಲ್ಲಿ ಸದಸ್ಯರಿದ್ದವರೇ ಈಗ ಮುಖ್ಯಮಂತ್ರಿ ಆಗಿದ್ದಾರೆ. ಸಿಎಂ ಆದವರಿಗೆ ಪರಿಜ್ಞಾನ ಬೇಡವೇ?’ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಬಿಡದಿ ಟೌನ್ಶಿಪ್ ಅನುಷ್ಠಾನ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಯಾರ್ಯಾರೋ ಬಂದು ಕಮಿಷನ್ ತೆಗೆದುಕೊಂಡು ಹೋಗುತ್ತಾರಷ್ಟೆ. ಆ ಭಾಗದ ರೈತರು ಬಹಳ ಬಿಗಿಯಾಗಿದ್ದಾರೆ’ ಎಂದರು.
‘ಬಿಡದಿ ಟೌನ್ಶಿಪ್ ವಿರೋಧಿಸಿ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ನಮ್ಮ ಶಾಸಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಾನು ಹೋಗುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಸರ್ವನಾಶ ಆಗುತ್ತೀರಿ ಎಚ್ಚರ...
‘ದುಡ್ಡು ಹೊಡೆಯುವುದನ್ನೇ ಕೆಲಸ ಮಾಡಿಕೊಳ್ಳಬೇಡಿ. ಮುಂದಿನ ಚುನಾವಣೆಯಲ್ಲಿ ಸರ್ವನಾಶ ಆಗುತ್ತೀರಿ, ಎಚ್ಚರ ವಹಿಸಿ. ಜಾಹೀರಾತು ಕೊಡುವಾಗ, ಜನರು ನಂಬುವಂತೆಯಾದರೂ ಕೊಡಿ. ಬಿಡದಿ ಯೋಜನೆಯಲ್ಲಿ ಲೂಟಿ ಮಾಡಲು ಹೊರಟಿದ್ದಾರೆ. ದುಡ್ಡು ಮಾಡುವ ಕಾರ್ಯಕ್ರಮವಷ್ಟೆ ಇದು’ ಎಂದು ವಾಗ್ದಾಳಿ ನಡೆಸಿದರು.
ಶಾಸಕಾಂಗ ಪಕ್ಷದ ಸಭೆ: ನಗರದಲ್ಲಿ ಪಕ್ಷದ ‘ಶಾಸಕಾಂಗ ಪಕ್ಷ’ದ ಸಭೆ ನಡೆಸಿದ ಕುಮಾರಸ್ವಾಮಿ, ತಮ್ಮ ಶಾಸಕರಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಹಾಗೂ ಅದರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು’ ಎಂದು ಸೂಚಿಸಿದ್ದಾರೆ.
‘ರೈತರ ಹಿತಕ್ಕೆ ವಿರುದ್ಧವಾಗಿ ರೂಪಿಸಿರುವ ಅವೈಜ್ಞಾನಿಕ ಬಿಡದಿ ಟೌನ್ಶಿಪ್ ಯೋಜನೆಯ ಬಗ್ಗೆಯೂ ಸದನದಲ್ಲಿ ಹೋರಾಟ ನಡೆಸಬೇಕು. ಈ ಯೋಜನೆಯಿಂದ ರೈತರು ಸಾವಿರಾರು ಎಕರೆ ಫಲವತ್ತಾದ ಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ನಮ್ಮ ಪಕ್ಷ ರೈತರ ಪರವಾಗಿ ನಿಲ್ಲಬೇಕು’ ಎಂದು ತಿಳಿಸಿದ್ದಾರೆ.
‘ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ನೈಸ್) ಯೋಜನೆಯ ಬಗ್ಗೆಯೂ ಧ್ವನಿ ಎತ್ತಬೇಕು. ರಸ್ತೆ ನಿರ್ಮಾಣದ ಉದ್ದೇಶಕ್ಕೆ ಭೂಮಿಯನ್ನು ಪಡೆದುಕೊಂಡು, ಅದನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸಾವಿರಾರು ರೈತರಿಗೆ ಈವರೆಗೆ ಪರಿಹಾರ ದೊರೆತಿಲ್ಲ. ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ಈ ಯೋಜನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೆಲ್ಲವನ್ನೂ ಪ್ರಸ್ತಾಪಿಸಬೇಕು’ ಎಂದು ಸೂಚಿಸಿದ್ದಾರೆ.
‘ಕೆಪಿಎಸ್ಸಿ ಅಕ್ರಮಗಳು, ಪೊಲೀಸ್ ನೇಮಕಾತಿಯಲ್ಲಿ ಆಗಿರುವ ಅಕ್ರಮಗಳು, ವಾಲ್ಮೀಕಿ ನಿಗಮದ ಹಗರಣ, ಬೆಂಗಳೂರು ನಗರದ ಅಸಮರ್ಪಕ ಕಸ ವಿಲೇವಾರಿ ಸೇರಿದಂತೆ ರಾಜ್ಯದ ಜನತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನಸೆಳೆಯಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
‘ಎನ್ಡಿಎ ಮಿತ್ರಪಕ್ಷಗಳು ಸಮರ್ಥವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಜನಪರ ವಿಷಯಗಳ ಬಗ್ಗೆ ಚರ್ಚಿಸಲು ರಾಜಿ ಬೇಡ. ಕ್ಷೇತ್ರದ ಸಮಸ್ಯೆಗಳ ಬಗ್ಗೆಯೂ ದೃಢವಾಗಿ, ನೇರವಾಗಿ ಚರ್ಚಿಸಿ, ಒಗ್ಗಟ್ಟಾಗಿ ಹೋರಾಡಿ. ಪ್ರಶ್ನೋತ್ತರ ಕಲಾಪವನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಸೂಚಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಶಾಸಕರಾದ ಎಚ್.ಡಿ.ರೇವಣ್ಣ, ಎ.ಮಂಜು, ಸಿ.ಎನ್.ಬಾಲಕೃಷ್ಣ, ವೆಂಕಟಶಿವಾರೆಡ್ಡಿ, ಹನೂರು ಮಂಜುನಾಥ್, ಸಮೃದ್ಧಿ ಮಂಜುನಾಥ್, ಎಂ.ಟಿ. ಕೃಷ್ಣಪ್ಪ, ಶರಣಗೌಡ ಕಂದಕೂರ, ಕರೆಮ್ಮ ನಾಯಕ, ಎಚ್.ಟಿ.ಮಂಜುನಾಥ್, ಜಿ.ಡಿ.ಹರೀಶ್ ಗೌಡ, ಸ್ವರೂಪ ಪ್ರಕಾಶ್, ವಿಧಾನಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ ಪಾಲ್ಗೊಂಡಿದ್ದರು.
ಮೈಸೂರಿನವರೇ ಆದ ಶಾಸಕ ಜಿ.ಟಿ. ದೇವೇಗೌಡ ಗೈರು ಹಾಜರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಅವರು ಬಹಳ ದೊಡ್ಡ ನಾಯಕರು. ತುಂಬಾ ಬ್ಯುಸಿ ಇದ್ದಾರೆ. ಮಾಡಲು ತುಂಬಾ ಕೆಲಸ ಇವೆ. ಆದ್ದರಿಂದ ಸಭೆಗೆ ಬಂದಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.