
ಗೋಕರ್ಣ| ಮೀನುಗಾರಿಕೆ ದೋಣಿ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ
ಗೋಕರ್ಣ: ಸಮೀಪದ ತದಡಿಯಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಮೋಹನ ಹರಿಕಂತ್ರ ಎಂಬುವವರಿಗೆ ಸೇರಿದ 'ಶ್ರೀದೇವಿ' ಹೆಸರಿನ ದೋಣಿ ಭಾನುವಾರ ಮುಳುಗಡೆಯಾಗಿದೆ.
ಅಘನಾಶಿನಿ ನದಿ ಮತ್ತು ಅರಬ್ಬಿ ಸಮುದ್ರ ಸೇರುವ ಅಳಿವೆಯಲ್ಲಿ ದುರ್ಘಟನೆ ಸಂಭವಿಸಿದೆ. ಸಮುದ್ರದ ಅಲೆಯ ರಭಸಕ್ಕೆ ದೋಣಿ ಸಂಪೂರ್ಣ ಮುಳುಗಿದೆ. ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮುಳುಗುವ ಹಂತದಲ್ಲಿದ್ದ ದೋಣಿಯಲ್ಲಿದ್ದವರನ್ನು ನಾಗರಾಜ ಹರಿಕಂತ್ರ ಅವರ ಇಡುಗುಂಜಿ ವಿನಾಯಕ ಎಂಬ ಹೆಸರಿನ ದೋಣಿಯಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿದ್ದಾರೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಗೋಕರ್ಣ ಪ್ರಾಥಮಿಕ ಕೇಂದ್ರಕ್ಕೆ ತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಗೋಕರ್ಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ ಎಸ್.ಆರ್ ತಿಳಿಸಿದ್ದಾರೆ.
ಮುಳುಗಡೆಯಾಗುತ್ತಿದ್ದ ದೋಣಿಯನ್ನು ಮತ್ತೊಂದು ದೋಣಿಗೆ ಕಟ್ಟಿ ಮೇಲೆತ್ತಲು ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ದೋಣಿ ಮುಳುಗಿದ್ದರಿಂದ ಲಕ್ಷಾಂತರ ಮೊತ್ತದ ಹಾನಿ ಆಗಿದೆ ಎಂದು ದೋಣಿ ಮಾಲೀಕ ಮೋಹನ ಹರಿಕಂತ್ರ ಹೇಳಿದ್ದಾರೆ.