ಸೇಡಂ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಎಲ್ಐಸಿ ಪ್ರತಿನಿಧಿ ಸಾವು
ಕಮಲಾಪುರ (ಕಲಬುರಗಿ ಜಿಲ್ಲೆ): ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೇಡಂ ರಸ್ತೆಯ ಕಾಳನೂರ ಬಳಿ ನಡೆದಿದೆ.
ಕಮಲಾಪುರ ತಾಲ್ಲೂಕಿನ ನಾವದಗಿ (ಬಿ) ಗ್ರಾಮದ ನಿವಾಸಿ ಎಲ್ಐಸಿ ಪ್ರತಿನಿಧಿ ಶಾಂತಗೌಡ ಸುಭಾಶ್ಚಂದ್ರ ಪೊಲೀಸ್ ಪಾಟೀಲ್ (50) ಮೃತರು.
ಶಾಂತಗೌಡ ಅವರು ಕಲಬುರಗಿಯಲ್ಲಿ ವಾಸವಾಗಿದ್ದು, ಸಂಜೆ ಕಲಬುರಗಿ ವಿಮಾನ ನಿಲ್ದಾಣ ಕಡೆಗೆ ತೆರಳಿದ್ದರು. ವಾಪಸ್ ಬರುತ್ತಿದ್ದಾಗ ಎದುರಿಗೆ ಬಂದ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಎದುರಿನ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.
ಸಂಜೆ 4ಕ್ಕೆ ಸ್ವಗ್ರಾಮ ನಾವದಗಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.