ರಾಜ್ಯವನ್ನು ₹320ಲಕ್ಷ ಕೋಟಿ ಆರ್ಥಿಕತೆಯನ್ನಾಗಿಸುವ ಗುರಿ; ಸಿಎಂ ಶಿವಕುಮಾರ್
ಬೆಂಗಳೂರು: ‘2047ರ ವೇಳೆಗೆ ಕರ್ನಾಟಕ ಆರ್ಥಿಕತೆಯನ್ನು 3 ಲಕ್ಷ ಕೋಟಿ ಡಾಲರ್ (₹320 ಲಕ್ಷ ಕೋಟಿ) ಹೆಚ್ಚಿಸಬೇಕು. ಇದಕ್ಕಾಗಿ ನಾಡಿನ ಜನರೆಲ್ಲರೂ ಒಟ್ಟಾಗಿ ದುಡಿಯಬೇಕು’ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
80ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ ನಗರದ ಮಾಣಿಕ್ಷಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.5.5ರಷ್ಟಿದ್ದರೂ, ದೇಶದ ಆರ್ಥಿಕತೆಯಲ್ಲಿ ರಾಜ್ಯದ ಪಾಲು ಶೇ.9.19ರಷ್ಟಿದೆ. 2025–26ರಲ್ಲಿ ರಾಜ್ಯದ ಒಟ್ಟು ಉತ್ಪನ್ನ (ಜಿಎಸ್ಡಿಪಿ) ₹32.81 ಲಕ್ಷ ಕೋಟಿಗೆ ತಲುಪಿದ್ದು, ಶೇ.8.1ರ ನೈಜ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಈಗಿನ ಒಟ್ಟು ಆರ್ಥಿಕತೆ 0.34 ಲಕ್ಷ ಕೋಟಿ ಡಾಲರ್ನಷ್ಟಿದೆ. 100ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಇದನ್ನು ₹320 ಲಕ್ಷ ಕೋಟಿಗೆ ಹೆಚ್ಚಿಸಬೇಕು’ ಎಂದು ಕರೆಕೊಟ್ಟರು.
‘‘ಭಾರತದ ಬಲ ಕರ್ನಾಟಕ’ ಎಂಬ ಪರಿಕಲ್ಪನೆಯೊಂದಿಗೆ ರಾಜ್ಯದ ಆರ್ಥಿಕ ಬೆಳವಣಿಗೆ ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಬೇಕು’ ಎಂದರು. ಇದನ್ನು ಸಾಧಿಸಲು ರಾಜ್ಯ ಸರ್ಕಾರವು ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ಅವರು ಜನರ ಮುಂದಿಟ್ಟರು.
* ಎಲ್ಲ ಶಾಲೆಗಳಲ್ಲಿ 6ನೇ ತರಗತಿಯಿಂದ ಎಐ ಶಿಕ್ಷಣ ಪರಿಚಯ.
* ‘ಎಐ ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಆರಂಭ.
* ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸ್ಥಾಪನೆ.
* ರಾಜ್ಯದ ವಿವಿಧೆಡೆ ಎಐ ಹಬ್ ಸ್ಥಾಪನೆ.
* ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’ ಯೋಜನೆ ಆರಂಭ.
* ಸರ್ಕಾರಿ ವಲಯದ 72,000 ಪ್ರಮುಖ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ. ಮುಂದಿನ ಆರು ತಿಂಗಳಲ್ಲಿ ಎಲ್ಲಾ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ.
* ಯುವಕರಿಗಾಗಿ ‘ಯುವ ಉದ್ಯೋಗ ಸೇತು’ ಯೋಜನೆ.
* ‘ಉದ್ಯೋಗ ನಿಧಿ’ ಯೋಜನೆ ಮೂಲಕ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ.
* ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹಧನ.
* ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ ಗುರಿ.
* ರೈತರಿಗಾಗಿ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ.
* ಡ್ರೋನ್ ಮತ್ತು ಉಪಗ್ರಹದ ಮೂಲಕ ಬೆಳೆ ಸಮೀಕ್ಷೆ ಹಾಗೂ ನೈಜ ಸಮಯದ ಮಾಹಿತಿ.
* ಸಣ್ಣ ರೈತರಿಗಾಗಿ ‘ರೈತ ಮಿತ್ರ’ ಕಾರ್ಯಕ್ರಮ.
* 3 ಎಕರೆ ಅಥವಾ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ 50% ಸಹಾಯಧನ.
* ದೊಡ್ಡಬಳ್ಳಾಪುರದಲ್ಲಿ ಅಡ್ವಾನ್ಸ್ ಮ್ಯಾನುಫ್ಯಾಕ್ಚರ್ ಕ್ಲಸ್ಟರ್ ಸ್ಥಾಪನೆ. ₹20,000 ಕೋಟಿ ಹೂಡಿಕೆ ಹಾಗೂ ಸುಮಾರು 1 ಲಕ್ಷ ಉದ್ಯೋಗಗಳ ಸೃಷ್ಟಿ ಗುರಿ.
* ‘ಬಿಯಾಂಡ್ ಬೆಂಗಳೂರು’ ಅಡಿಯಲ್ಲಿ ಐದು ಜಾಗತಿಕ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ.
* ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ‘ಸಹಾಯ ಹಸ್ತ’ ಯೋಜನೆ.
* ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಲ್ಲಿ 7.5% ಮೀಸಲಾತಿ.
* ರಾಜ್ಯದ ಪ್ರತಿಯೊಂದು ಪಟ್ಟಣ ಮತ್ತು ನಗರದಲ್ಲಿ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಅಭಿವೃದ್ಧಿ.
* ಬೆಂಗಳೂರು ಬಿಸಿನೆಸ್ ಕಾರಿಡಾರ್ – 117 ಕಿ.ಮೀ. ರಿಂಗ್ ರಸ್ತೆ ಯೋಜನೆಗೆ ಚಾಲನೆ.
* ಬೆಂಗಳೂರಿನಲ್ಲಿ ಐದು ಹೊಸ ಕಮಿಷನರೇಟ್ ಗಳ ಸ್ಥಾಪನೆ.
* ಬೆಂಗಳೂರಿನಲ್ಲಿ ರೌಡಿ ನಿಗ್ರಹ ಪಡೆ ರಚನೆ.
* ಬೆಂಗಳೂರಿನಲ್ಲಿ ಐದು ಬೃಹತ್ ವೃಕ್ಷೋಧ್ಯಾನ (ಟ್ರೀ ಪಾರ್ಕ್) ನಿರ್ಮಾಣ.
* ಬೆಂಗಳೂರಿನ ಏಳು ಪ್ರಮುಖ ಕೆರೆಗಳ ಅಭಿವೃದ್ಧಿ.
* ವಾಹನ ಮಾಲೀಕರಿಗೆ ಸರಳ ವಿಮಾ ಸೇವೆಗಾಗಿ ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪನೆ.
* ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಜಾಸೇವೆ ಇಲಾಖೆ ಸ್ಥಾಪನೆ.
* 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ₹16,000 ಕೋಟಿ ಅನುಮೋದನೆ.
ಭರಪೂರ ಕವಾಯತು, ಶಕ್ತಿ ಪ್ರದರ್ಶನ, ನೃತ್ಯರೂಪಕ
ಬೆಂಗಳೂರಿನ ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳಿಂದ ‘ವಂದೇ ಮಾತರಂ ಶಾಂತಿ ಮಂತ್ರ’, ಉತ್ತರ ನಗರ ಪಾಲಿಕೆಯ ಪಿಳ್ಳಣ್ಣ ಗಾರ್ಡನ್ ಸಂಯುಕ್ತ ಪದವಿಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳಿಂದ ‘ಸ್ವಾತಂತ್ರ್ಯ ಸಂಗ್ರಾಮದ ವೈಭವ’, ಶೇಷಾದ್ರಿಪುರ ಕಾಲೇಜು, ರಾಜೀವ್ಗಾಂಧಿ ವಿಶ್ವವಿದ್ಯಾಲಯ, ರೇವಾ ಯೂನಿವರ್ಸಿಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ವಿಟಿಯು ಕಾಲೇಜಿನ 600 ವಿದ್ಯಾರ್ಥಿಗಳು ‘ಭಾರತ ಜೋಡೋ ಯುವ ಸಂಘ ಯೋಜನೆ’ ನೃತ್ಯರೂಪಕವನ್ನು ಪ್ರಸ್ತುತ ಪಡಿಸಿದರು.
ಬೀದರ್ ಜಿಲ್ಲೆಯ ಅಕ್ಕ ಪಡೆಯ 70 ಮಹಿಳಾ ಸಿಬ್ಬಂದಿ ಮತ್ತು ಬೆಂಗಳೂರು ನಗರದ 100 ಮಹಿಳಾ ಪೊಲೀಸ್ ಸಿಬ್ಬಂದಿ, ಅಕ್ಕ ಪಡೆ ಶಕ್ತಿ ಮತ್ತು ಸ್ವಯಂರಕ್ಷಣಾ ತಂತ್ರಗಳನ್ನು ಪ್ರದರ್ಶಿಸಿದರು.
ಕೆಎಸ್ಆರ್ಪಿ, ಸಿಆರ್ಪಿಎಫ್, ಬಿಎಸ್ಎಫ್, ಸಿಎಎಆರ್, ಗೋವಾ ಪೊಲೀಸ್, ಕೆಎಸ್ಐಎಸ್ಎಫ್, ಸಂಚಾರ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಸಂಚಾರ ವಾರ್ಡನ್, ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ಮತ್ತು ಬ್ಯಾಂಡ್ನಲ್ಲಿ ಒಟ್ಟು 37 ತುಕಡಿಗಳಿಂದ ಕವಾಯತು ನಡೆಯಿತು.