
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08 : ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಅಘಾತವಾಗಿದೆ. ಮನೆಯಲ್ಲಿದ್ದ ಸುಮಾರು ರೂಪಾಯಿ 23 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಾನುಗಳನ್ನು ಕಳುವಾಗಿರುವ ಘಟನೆ ನಗರದ ದೊಡ್ಡಪೇಟೆಯಲ್ಲಿ ನಡೆದಿದೆ.
ನಗರದ ದೊಡ್ಡಪೇಟೆಯ ಪ್ರೇಮಾ ರಾಜಾರಾವ್ ಅವರ ಮನೆಯಲ್ಲಿ ಈ ದರೋಡೆ ನಡೆದಿದೆ. ಹಬ್ಬದ ಕೆಲ ದಿನಗಳ ಮುಂಚೆ ಮನೆಯವರು ಬೇರೆ ಊರಿಗೆ ಹೋಗಿದ್ದರು. ನಿನ್ನೆ ರಾತ್ರಿ (ಆಗಸ್ಟ್. 07) ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಆಗಸ್ಟ್ 05 ನೇ ತಾರೀಖಿನಂದು ಕಳ್ಳತನ ಆಗಿದ್ದು, ನಿನ್ನೆ ಮನೆಗೆ ಬಂದಾಗಲೇ ಈ ವಿಷಯ ತಿಳಿದು ಬಂದಿದೆ.
ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ ಅಂದಾಜು 23 ಲಕ್ಷ ಮೌಲ್ಯದ 200 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ಕೆಜಿ ಬೆಳ್ಳಿ ಆಭರಣಗಳು, 6 ಸಾವಿರ ನಗದು, ರೇಷ್ಮೆ ಸೀರೆಗಳು ಕಳುವಾಗಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನಗರಠಾಣೆ CPI ಉಮೇಶ್ ಬಾಬು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.


