
ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಆಚರಿಸುವ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಕೆಂಡದ ಗುಂಡಿಗೆ ಹರಿಕೆ ಹೊತ್ತ ಸಾವಿರಾರು ಭಕ್ತರು ಸುಮಾರು 15 ರಿಂದ 20 ಟ್ರಾಕ್ಟರ್ ನಲ್ಲಿ ಕಟ್ಟಿಗೆ ತಂದು ಹಾಕಿದರು. ಸೋಮವಾರ ಬೆಳಗ್ಗೆ ದೇವರ ಭೇಟಿ ನಡೆಯಿತು. ಸಂಜೆ ಹೆಣ್ಣು ಮಕ್ಕಳು ಬೆಳಗಿನಿಂದ ಉಪಾಸವಿದ್ದು ಕೆಂಡದ ಗುಂಡಿಗೆ ದುಗ್ಗಳ ರೂಪದಲ್ಲಿ ಕೆಂಡವನ್ನು ಹೊತ್ತು ಪ್ರದಕ್ಷಣೆ ಮಾಡುತ್ತಾರೆ. ತದನಂತರ ಮಂಗಳವಾರ ಬೆಳಗಿನ ಜಾವ ಐದು 5.00 ಗಂಟೆಗೆ ಕೆಂಡ ತುದಿಯಲಾಯಿತು. ಸುಮಾರು 500 ರಿಂದ 600 ಜನರು ಕೆಂಡವನ್ನು ತುಳಿದರು. ನಂತರ ದೇವರಿಗೆ ಹರಕೆ ಹೊತ್ತಂತ ಭಕ್ತಾದಿಗಳು ಬೆಲ್ಲ ಸಕ್ಕರೆ ಹೂವಿನ ಹಾರ ವನ್ನು ದೇವರಿಗೆ ಸಮರ್ಪಣೆ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಮಾತನಾಡಿ ನಮ್ಮ ಗ್ರಾಮದಲ್ಲಿ ಹಿಂದಿನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿಯಲ್ಲಿ ಕಟ್ಟಿಗೆಯನ್ನು ತಂದು ಕೆಂಡದ ಗುಂಡಿಗೆ ಹಾಕುತ್ತಿದ್ದರು. ಗ್ರಾಮದಲ್ಲಿ ಮದುವೆಯಾಗಿ ಹೋದಂತ ಹೆಣ್ಣು ಮಕ್ಕಳು ಮೊಹರಂ ಹಬ್ಬಕೋಸ್ಕರ ಗ್ರಾಮಕ್ಕೆ ಬರುತ್ತಾರೆ. ಹೊರ ರಾಜ್ಯದಿಂದಲೂ ಹಬ್ಬಕ್ಕೆ ಗ್ರಾಮಕ್ಕೆ ಬರುತ್ತಾರೆ. ಹೈದರಾಬಾದ್, ಆಂಧ್ರ, ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ನಮ್ಮ ಗ್ರಾಮದಲ್ಲಿ ಜಾತಿ ಭೇದವಿಲ್ಲದಂತೆ ಮೊಹರಂ ಹಬ್ಬವನ್ನು ಆಚರಿಸುತ್ತೇವೆ ಎಂದು ತಿಳಿಸಿದರು.


