
ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 08 : ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯಲ್ಲಿ 2022-23 ನೇ ಸಾಲಿನಲ್ಲಿ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಶೋಷತರ)ವಾದದಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕೆ.ಎ.ಆಕಾಶ್ ಬಿನ್ ಕೆ.ಎಂ.ಆನಂದ ಇವರು ಮೊಳಕಾಲ್ಮೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಲಕ್ಷ್ಮಣರವರ ಸಂಬಂಧಿಯಾಗಿದ್ದು, ಪೌರ ಕಾರ್ಮಿಕರಾಗಿ ಅಕ್ರಮವಾಗಿ ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯಲ್ಲಿ ನೇಮಕವಾಗಿದ್ದು, ಕೆಲಸ ನಿರ್ವಹಿಸದೆ ಇದ್ದರೂ ಕಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಹಾಜರಾತಿ ನೀಡಿ ವೇತನ ಪಾವತಿಸಿರುತ್ತಾರೆ. ಜಿ.ಬಿ.ಬಸವರಾಜ್ ಬಿನ್ ಗಿರಿಯಪ್ಪ ಇವರು ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಅಂದಿನ ಮುಖ್ಯಾಧಿಕಾರಿಯಾಗಿದ್ದ ಕಾಂತರಾಜ್ರವರ ಸಂಬಂಧಿಯಾಗಿದ್ದು, ಇವರು ಸಹ ಅಕ್ರಮವಾಗಿ ಪೌರ ಕಾರ್ಮಿಕರಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ.
ಚಿತ್ರದುರ್ಗ ನಿವಾಸಿಯಾಗಿದ್ದು, ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರುವುದಿಲ್ಲ. ಪೌರ ಕಾರ್ಮಿಕರಾಗಿ ಆಯ್ಕೆಯಾಗಿರುವ ಹತ್ತು ಜನರಲ್ಲಿ ಡಿ.ಸಿದ್ದಪ್ಪ, ಎಂ.ಹನುಮಂತಪ್ಪ ಇವರುಗಳನ್ನು ಹೊರತುಪಡಿಸಿದರೆ ಉಳಿದ ಎಂಟು ಪೌರ ಕಾರ್ಮಿಕರು ಯಾವ ಸಾಲಿನಲ್ಲಿ ಗುತ್ತಿಗೆ ಆಧಾರದ ಮೇಲೆ ಸೇರಿರುತ್ತಾರೆ. ಗುತ್ತಿಗೆದಾರರು ಯಾರು? ಯಾವ ಬ್ಯಾಂಕಿನಿಂದ ವೇತನ ಪಾವತಿಸಲಾಗಿದೆ? ನಕಲಿ ದಾಖಲೆಗಳು ಸೃಷ್ಟಿಯಾಗಿದ್ದು, ಕೂಲಂಕುಶ ತನಿಖೆ ನಡೆಸಿದರೆ ಸತ್ಯಾಂಶ ಬಯಲಿಗೆ ಬರುತ್ತದೆ. ನೇರ ನೇಮಕಾತಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಕಚೇರಿ ವ್ಯವಸ್ಥಾಪಕರನ್ನು ಕೂಡಲೆ ಅಮಾನತ್ತುಪಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್ ಒತ್ತಾಯಿಸಿದರು.



