
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.05 : ಪಿಳ್ಳೆಕೆರನಹಳ್ಳಿಯಲ್ಲಿರುವ ರಿ.ಸ.ನಂ. 38/1 ರ ಜಂಟಿ ಖಾತೆಯಿರುವ ದಲಿತರ ಖಾಸಗಿ ಜಮೀನಿನಲ್ಲಿ ಮೇಲ್ಜಾತಿಯವರ ಕುಮ್ಮಕ್ಕಿನಿಂದ ಕೆಲವರು ಅತಿಕ್ರಮವಾಗಿ ಪ್ರವೇಶಿಸಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿರುವುದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಹಾನಾಯಕ ದಲಿತ ಸೇನೆ ವತಿಯಿಂದ ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ಧರಣಿ ಶುಕ್ರವಾರ ಅಂತ್ಯಗೊಂಡಿತು.
ಗೋನೂರು ಗ್ರಾಮದ ವಾಸಿಗಳಾದ ಓಬಯ್ಯ, ಪಾಪಣ್ಣ, ನೀಲಮ್ಮ, ಚಂದ್ರಣ್ಣ, ಮಂಜುನಾಥ, ಗೋಪಾಲ ಇವರ ಹೆಸರುಗಳಿಗೆ ಖಾತೆಯಿರುವ ನಾಲ್ಕು ಎಕರೆ 28 ಗುಂಟೆ ಜಮೀನಿನಲ್ಲಿ ಕೆಲವರು ಗುಂಪುಕಟ್ಟಿಕೊಂಡು ಬಂದು ರಾತ್ರೋರಾತ್ರಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೇಳಲು ಹೋದ ಜಮೀನಿನ ಮಾಲೀಕರ ಮೇಲೆ ಜಾತಿ ನಿಂದಿಸಿ ದೌರ್ಜನ್ಯವೆಸಗಿರುತ್ತಾರೆ.
ಈ ಸಂಬಂಧ ಬಡಾವಣೆ ಠಾಣೆಗೆ ದೂರು ನೀಡಲಾಗಿದ್ದು, ತಹಶೀಲ್ದಾರ್ ಹಾಗೂ ಡಿ.ವೈ.ಎಸ್ಪಿ.ರವರ ಗಮನಕ್ಕೂ ತರಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸುವಂತೆ ಕಂದಾಯ ಸಚಿವರು ಹಾಗೂ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಹಾಗಾಗಿ ಅತಿಕ್ರಮಣ ಮಾಡಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಂಡು ದಲಿತರಿಗೆ ಜಮೀನು ಬಿಡಿಸಿಕೊಡಬೇಕೆಂದು ಮಹಾನಾಯಕ ದಲಿತ ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಮಹಾನಾಯಕ ದಲಿತ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಎ.ತಾಳಿಕೆರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಳೆಯಪ್ಪ ಕೆ. ಸಾಕ್ಯ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರದೀಪ್
ಕಾರ್ಯದರ್ಶಿ ಪೆನ್ನೇಶ್ ಕೆ. ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
The post ಪಿಳ್ಳೆಕೆರನಹಳ್ಳಿಯಲ್ಲಿ ಅತಿಕ್ರಮವಾಗಿ ಗುಡಿಸಲುಗಳ ನಿರ್ಮಿಸಿರುವವರ ವಿರುದ್ದ ಕಾನೂನು ಕ್ರಮಕ್ಕೆ ಮಹಾನಾಯಕ ದಲಿತ ಸೇನೆ ಒತ್ತಾಯ first appeared on Kannada News | suddione.
[Collection]