
ಬೀದರ್ | ಪಾಲಿಕೆಯಿಂದ ಶ್ವಾನಗಳ ಪೋಷಣೆಗೆ ಪ್ರಾಣಿಗಳ ಸಂರಕ್ಷಣಾ ಕೇಂದ್ರ ಆರಂಭ
ಮರಕಲ್(ಜನವಾಡ): ಬೀದರ್ ಮಹಾನಗರ ಪಾಲಿಕೆಯು ಬೀದಿ ನಾಯಿ ಹಾಗೂ ಬೀಡಾಡಿ ದನಗಳ ಸಂರಕ್ಷಣೆಗೆ ಬೀದರ್ ತಾಲ್ಲೂಕಿನ ಮರಕಲ್ ಸಮೀಪದ ಹಳೆಯ ಜಲ ಶುದ್ಧೀಕರಣ ಘಟಕದಲ್ಲಿ ‘ಪ್ರಾಣಿಗಳ ಸಂರಕ್ಷಣೆ ಕೇಂದ್ರ’ ಆರಂಭಿಸಿದೆ.
ಘಟಕದ ಕಟ್ಟಡಗಳನ್ನು ಕೇಂದ್ರದ ಅವಶ್ಯಕತೆಗೆ ಅನುಗುಣವಾಗಿ ನವೀಕರಣ ಮಾಡಿದೆ. ಪ್ರತ್ಯೇಕ ಕಟ್ಟಡಗಳನ್ನು ಮೇವು ತಯಾರಿಕೆ ಕೊಠಡಿ, ವೈದ್ಯರ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಭದ್ರತಾ ಸಿಬ್ಬಂದಿ ಕೊಠಡಿಗಳಾಗಿ ಪರಿವರ್ತಿಸಿದೆ.
150 ನಾಯಿಗಳ ಸಾಮರ್ಥ್ಯದ ಕಬ್ಬಿಣದ ನಾಯಿಗಳ ಗೂಡುಗಳನ್ನು ನಿರ್ಮಿಸಿದೆ. ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಿಸಿದೆ. ಆವರಣದಲ್ಲಿ ಸಸಿ ನೆಟ್ಟಿದೆ. ಕೇಂದ್ರದಲ್ಲಿ ಮೊದಲ ಹಂತದಲ್ಲಿ ಬೀದರ್ ನಗರದಲ್ಲಿನ ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡುವ ಕಾರ್ಯ ಶುರು ಮಾಡಿದೆ.
‘ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪ್ರಾಣಿಗಳ ಸಂರಕ್ಷಣೆ ಕೇಂದ್ರ ಪ್ರಾರಂಭಿಸಲಾಗಿದೆ’ ಎಂದು ತಿಳಿಸುತ್ತಾರೆ ಬೀದರ್ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್.
‘ಸಾರ್ವಜನಿಕರಿಗೆ ಹಾನಿ ಉಂಟು ಮಾಡಬಾರದೆಂಬ ಕಾರಣಕ್ಕೆ ನಾಯಿ ಹಿಡಿಯುವ ಸ್ವಯಂ ಸೇವಾ ಸಂಸ್ಥೆ ಮೂಲಕ ಈಗಾಗಲೇ ಬ್ರಿಮ್ಸ್, ಬೀದರ್ನ ಓಲ್ಡ್ ಸಿಟಿಯ ಸಾರ್ವಜನಿಕ ಆಸ್ಪತ್ರೆ, ಶಾಲೆ, ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಪ್ರದೇಶದಲ್ಲಿನ 65 ಬೀದಿ ನಾಯಿಗಳನ್ನು ಹಿಡಿದು ತಂದು, ಕೇಂದ್ರದಲ್ಲಿ ಇಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ನಾಯಿಗಳಿಗೆ ರೇಬಿಸ್ ಪ್ರತಿರೋಧಕ ಲಸಿಕೆ ಕೊಡಲಾಗಿದೆ. ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ತಜ್ಞ ಪಶು ವೈದ್ಯರಿಂದ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸಿ, ಏಳು ದಿನ ನಿಗಾ ಘಟಕದಲ್ಲಿ ಇರಿಸಲಾಗುವುದು. ಬಳಿಕ ಅವುಗಳ ಪೋಷಣೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
‘ಸಮೀಕ್ಷೆ ಪ್ರಕಾರ ಬೀದರ್ನ ಶಾಲೆ, ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಪ್ರದೇಶದಲ್ಲಿ 725 ಬೀದಿ ನಾಯಿಗಳಿವೆ. ಬೀದರ್ ಮಹಾನಗರದ ಸಾರ್ವಜನಿಕ ಸ್ಥಳಗಳಲ್ಲಿನ ನಾಯಿಗಳನ್ನು ಸಹ ಹಿಡಿದು ತಂದು, ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸಿ, ನಂತರ ಅವುಗಳನ್ನು ತಂದ ಸ್ಥಳಕ್ಕೆ ಮರಳಿ ಒಯ್ದು ಬಿಡಲಾಗುವುದು’ ಎಂದು ತಿಳಿಸಿದ್ದಾರೆ.
‘ಬೀದರ್ನ 10 ಸಸ್ಯಹಾರಿ ಹಾಗೂ ಮಾಂಸಾಹಾರಿ ಹೋಟೆಲ್ಗಳ ಮಾಲೀಕರು ಕೇಂದ್ರದ ಬೀದಿ ನಾಯಿಗಳಿಗೆ ಉಚಿತವಾಗಿ ಆಹಾರ ಒದಗಿಸುತ್ತಿದ್ದಾರೆ. ಆರೋಗ್ಯ ನಿರೀಕ್ಷಕ ಸೇರಿ ಕೇಂದ್ರದಲ್ಲಿ ಆರು ಸಿಬ್ಬಂದಿ ಇದ್ದಾರೆ’ ಎಂದು ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-33-1325112529