
ದೆಹಲಿ.ಜುಲೈ.20: ಸಂಸತ್ತಿನ ಮುಂಗಾರು ಅಧಿವೇಶನದ ನಡುವೆಯೇ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯ ಬಿಸಿ ಏರಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿದ್ದ ‘ಚಲೋ ಸಂಸತ್’ ಮಹಾಮೆರವಣಿಗೆಗೂ ಮುನ್ನವೇ ದೆಹಲಿಯ ಜಂತರ್ ಮಂತರ್ ರಣರಂಗವಾಗಿ ಮಾರ್ಪಟ್ಟಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬ್ಯಾರಿಕೇಡ್ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ.
ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಸತ್ ಭವನ ಸೇರಿದಂತೆ ನವದೆಹಲಿ ಜಿಲ್ಲೆಯಾದ್ಯಂತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163ರ ಅಡಿಯಲ್ಲಿ ಕಠಿಣ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದಾಗ್ಯೂ, ಪೊಲೀಸರ ಬಿಗಿ ಭದ್ರತೆಯ ನಡುವೆಯೂ ದೇಶದ ವಿವಿಧೆಡೆಗಳಿಂದ ಆಗಮಿಸಿರುವ ಸಾವಿರಾರು ಸಿಜೆಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಜಮಾಯಿಸಿದ್ದಾರೆ.
ಮೆರವಣಿಗೆ ಆರಂಭವಾಗುವ ಮುನ್ನ ಮಾತನಾಡಿದ ಪ್ರಖ್ಯಾತ ಸಮಾಜಸೇವಕ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಅವರು, ಆಕ್ರೋಶದ ನಡುವೆಯೂ ಸಂಯಮ ಕಾಯ್ದುಕೊಳ್ಳುವಂತೆ ಪ್ರತಿಭಟನಾಕಾರರಲ್ಲಿ ವಿನಂತಿಸಿದರು. ಶಿಕ್ಷಣದಂತಹ ಅತ್ಯಂತ ಮಹತ್ವದ ವಿಷಯದ ಮೇಲೆಯೇ ನಮ್ಮ ಹೋರಾಟ ಕೇಂದ್ರೀಕೃತವಾಗಿರಬೇಕು ಮತ್ತು ಯಾವುದೇ ಕಾರಣಕ್ಕೂ ನಮ್ಮ ಮೂಲ ಗುರಿಯಿಂದ ಯುವಜನತೆ ವಿಚಲಿತರಾಗಬಾರದು ಎಂದು ಅವರು ಕಿವಿಮಾತು ಹೇಳಿದರು.
#WATCH | Delhi | Protesters gathered for CJP's protest march clash with RPF personnel at Jantar Mantar; RPF personnel & police use lathis for crowd control pic.twitter.com/gijaCjJksW
— ANI (@ANI) July 20, 2026
ಲಾಠಿಚಾರ್ಜ್ ಘಟನೆಯ ನಂತರ ಪ್ರತಿಕ್ರಿಯಿಸಿದ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಅವರು, ಸೋನಂ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದ್ದು, ಅವರ ಉಪವಾಸ ಸತ್ಯಾಗ್ರಹ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದರು. ಕಳೆದ ಒಂದು ತಿಂಗಳಿನಿಂದ ತಾವು ನಡೆಸಿಕೊಂಡು ಬಂದಿರುವ ಶಾಂತಿಯುತ ಪ್ರತಿಭಟನೆಯನ್ನು ಮುಂದೆಯೂ ಅದೇ ಹಾದಿಯಲ್ಲಿ ಮುನ್ನಡೆಸುವುದಾಗಿ ತಿಳಿಸಿದ ಅವರು, ದೇಶದ ಯುವ ಹೋರಾಟಗಾರರಿಗೆ ಸೋನಂಜಿ ತಮ್ಮ ಶುಭ ಹಾರೈಕೆಗಳನ್ನು ತಲುಪಿಸಿದ್ದಾರೆ ಎಂದರು.
‘ಜಿರಳೆಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’
ಪ್ರತಿಭಟನೆಯ ತೀವ್ರತೆಯ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ವಿಡಿಯೋ ಹಂಚಿಕೊಂಡಿರುವ ಸಿಜೆಪಿ, ದೆಹಲಿಯ ಭಾರಿ ಮಳೆ ಮತ್ತು ಪೊಲೀಸರ ಕಠಿಣ ಭದ್ರತೆಯ ಕೋಟೆಯನ್ನು ಭೇದಿಸಿಯಾದರೂ ಜಿರಳೆಗಳ ಸೈನ್ಯ ಮುನ್ನುಗ್ಗಲಿದೆ, ಇಂದಿನ ನಮ್ಮ ಹೋರಾಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದೆ.


source https://suddione.com/breaking-news-police-lathi-charge-cjp-protesters/

0 Comments
If u have any queries, Please let us know