
ದೆಹಲಿ.ಜುಲೈ.22: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರಧಾನಿ ನಿವಾಸದ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನವದೆಹಲಿಯ ಇಂದಿರಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯ ಆರಂಭದಲ್ಲೇ ಪೊಲೀಸರ ದೌರ್ಜನ್ಯದ ವಿಡಿಯೋ ಪ್ರದರ್ಶಿಸಿದ ಅವರು, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆ ರಾಹುಲ್ ಗಾಂಧಿ ಅವರ ಮೊದಲ ಬೇಡಿಕೆಯಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಎರಡನೇ ಆಗ್ರಹವಾಗಿದೆ. ಇಡೀ ವ್ಯವಸ್ಥೆಯನ್ನು ಮುನ್ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವಿದ್ಯಾರ್ಥಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಮೂರನೇ ಬೇಡಿಕೆಯಾಗಿ ಒತ್ತಾಯಿಸಿದ್ದಾರೆ.
ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳು ಇಂದು ಬೀದಿಗೆ ಬಿದ್ದು ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ವಿರೋಧ ಪಕ್ಷವೂ ಅವರ ಪರವಾಗಿ ರಸ್ತೆಗೆ ಇಳಿದು ಧ್ವನಿ ಎತ್ತುವುದು ಕರ್ತವ್ಯವಾಗಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಪ್ರಧಾನಿ ನಿವಾಸದ ಕಡೆಗೆ ತೆರಳುವ ಮುನ್ನ ತಾವು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ಇದು ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯದ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಕೋರಿದ್ದಾಗಿ ತಿಳಿಸಿದರು. ಆದರೆ ಸ್ಪೀಕರ್ ಈ ವಿಷಯವನ್ನು ನಿರ್ಲಕ್ಷಿಸಿದ್ದರಿಂದ, ನಿದ್ರಿಸುತ್ತಿರುವ ಸರ್ಕಾರವನ್ನು ಎಚ್ಚರಿಸಲು ನಾವು ಬೀದಿಗೆ ಇಳಿಯಬೇಕಾಯಿತು ಎಂದು ಸ್ಪಷ್ಟಪಡಿಸಿದರು.
#WATCH | Delhi: On Union Minister Jitendra Singh's statement, Lok Sabha LoP and Congress MP Rahul Gandhi says, "We are fully supporting the students' movement. Blood was coming out of my mouth yesterday. We are fully supporting it… Jitendra Singh is irrelevant in this… pic.twitter.com/dI772hCLvg
— ANI (@ANI) July 22, 2026
ತಮ್ಮ ವಿರುದ್ಧದ ಪೊಲೀಸ್ ನಡವಳಿಕೆ ಅಥವಾ ಕ್ರಮಗಳ ಬಗ್ಗೆ ತಮಗೆ ಯಾವುದೇ ಚಿಂತೆ ಇಲ್ಲ ಎಂದ ರಾಹುಲ್, ಸರ್ಕಾರ ತನ್ನ ವಿರುದ್ಧ ಏನು ಬೇಕಾದರೂ ಮಾಡಿಕೊಳ್ಳಲಿ, ಆದರೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬಾರದು ಎಂದರು. ಕಳೆದ 10 ವರ್ಷಗಳಲ್ಲಿ ಸುಮಾರು 152 ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, ಇದರಿಂದ ಸುಮಾರು 7.5 ಕೋಟಿ ಕುಟುಂಬಗಳು ಕತ್ತಲಲ್ಲಿ ತಳ್ಳಲ್ಪಟ್ಟಿವೆ. ಸರ್ಕಾರ ಉದ್ಯೋಗಾವಕಾಶಗಳನ್ನು ನಾಶಪಡಿಸಿದೆ ಮತ್ತು ಸತತ ಪೇಪರ್ ಲೀಕ್ ಘಟನೆಗಳು ನಡೆಯುತ್ತಿದ್ದರೂ ಈವರೆಗೆ ಯಾರೊಬ್ಬರ ಮೇಲೆಯೂ ಕಠಿಣ ಕ್ರಮ ಜರುಗಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
NEET ಪರೀಕ್ಷೆಗಾಗಿ ಸರ್ಕಾರ 1.32 ಲಕ್ಷ ಕೋಟಿ ರೂಪಾಯಿ ಹಾಗೂ ಶಿಕ್ಷಣ ಮುಂಗಡ ಪತ್ರಕ್ಕಾಗಿ 1.4 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದರೂ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ವಿಫಲವಾಗಿದೆ. ಪರೀಕ್ಷಾ ಪವಿತ್ರತೆಯನ್ನು ಹಾಳುಮಾಡಿದ ಪ್ರಭಾವಿಗಳಿಗೆ ಸರ್ಕಾರ ಶಿಕ್ಷೆ ವಿಧಿಸುತ್ತಿಲ್ಲ. ವಿದ್ಯಾರ್ಥಿಗಳು ಯಾವುದೇ ಅಪರಾಧ ಮಾಡಿಲ್ಲ, ಬದಲಾಗಿ ವ್ಯವಸ್ಥೆಯ ಸುಧಾರಣೆಗಾಗಿ ಶಾಂತಿಯುತವಾಗಿ ಧ್ವನಿ ಎತ್ತುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಬೆದರಿಸಿ, ಹೊಡೆದು ಪೆಟ್ಟು ನೀಡುವುದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯಾಗಿದೆ ಎಂದು ಅವರು ಖಂಡಿಸಿದರು.


source https://suddione.com/dharmendra-pradhan-should-resign-rahul-gandhi-puts-three-conditions-on-the-central-government/

0 Comments
If u have any queries, Please let us know