ನಿರುದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್ : ಉದ್ಯೋಗ ಅರ್ಹತೆಗಳ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ನವದೆಹಲಿ: ದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಕೋಟ್ಯಂತರ ನಿರುದ್ಯೋಗಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಭಾರಿ ಶಾಕ್ ನೀಡಿದೆ. ಇದುವರೆಗೆ ನಿಗದಿತ ಉದ್ಯೋಗ ಅರ್ಹತೆಗಳ ಜೊತೆಗೆ ಹೆಚ್ಚುವರಿ ಅಥವಾ ಉನ್ನತ ಶಿಕ್ಷಣದ ಅರ್ಹತೆ ಹೊಂದಿದ್ದರೆ ಉದ್ಯೋಗ ಸಿಗುವುದು ಖಚಿತ ಎಂದು ಭಾವಿಸಲಾಗುತ್ತಿತ್ತು. ಆದರೆ ಇನ್ಮುಂದೆ ಅದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇನ್ಮುಂದೆ ನಿರುದ್ಯೋಗಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ಕಡಿಮೆ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳಿಗೆಂದೇ ನಿರ್ದಿಷ್ಟವಾಗಿ ಮೀಸಲಿಟ್ಟಿರುವ ಉದ್ಯೋಗಗಳಿಗೆ, ಉನ್ನತ ಶಿಕ್ಷಣ ಪಡೆದ ವ್ಯಕ್ತಿಯನ್ನು ಆಯ್ಕೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯಾರಾದರೂ ಅಂತಹ ಉದ್ಯೋಗವನ್ನು ಪಡೆಯಲು ತಮ್ಮ ಉನ್ನತ ಶಿಕ್ಷಣದ ಮಾಹಿತಿಯನ್ನು ಮುಚ್ಚಿಟ್ಟರೆ, ಅದು ನಿಜವಾಗಿಯೂ ಅರ್ಹರಾದ ಇತರ ಅಭ್ಯರ್ಥಿಗಳ ಅವಕಾಶವನ್ನು ಕಸಿದುಕೊಂಡಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ

ಸಿಂಡಿಕೇಟ್ ಬ್ಯಾಂಕ್‌ನಲ್ಲಿ ತಾತ್ಕಾಲಿಕ ಬ್ಯಾಂಕ್ ಅಟೆಂಡೆಂಟ್ ಹುದ್ದೆಯು ಕೇವಲ 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿತ್ತು. ಆದರೆ, ಈ ಹುದ್ದೆಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರು ತಾನು ಪದವೀಧರ (ಗ್ರಾಜುಯೇಟ್) ಎಂಬ ವಿಷಯವನ್ನು ಮರೆಮಾಚಿದ್ದರು. ಇದನ್ನು ತಪ್ಪು ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಇಂತಹ ಕ್ರಮಗಳು ಉದ್ಯೋಗ ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆಯನ್ನು ಬಾಧಿಸುತ್ತವೆ ಎಂದು ಹೇಳಿದೆ.

ಸರ್ಕಾರವು ಉದ್ಯೋಗ ನೀಡುವಾಗ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಕಡಿಮೆ ವಿದ್ಯಾರ್ಹತೆ ಹೊಂದಿರುವವರಿಗೂ ಸಮಾನ ಅವಕಾಶಗಳು ಸಿಗಲಿ ಎಂಬ ಉದ್ದೇಶದಿಂದಲೇ ಕೆಲವು ಹುದ್ದೆಗಳನ್ನು ಅವರಿಗಾಗಿ ಮೀಸಲಿಡಲಾಗುತ್ತದೆ.ಈ ಹುದ್ದೆಗಳಿಗೆ ಉನ್ನತ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ, ವಾಸ್ತವವಾಗಿ ಆ ಉದ್ಯೋಗ ಯಾರಿಗೆ ಸಿಗಬೇಕೋ ಅವರ ಅವಕಾಶಗಳು ಕೈತಪ್ಪುತ್ತವೆ. ಸರ್ಕಾರಿ ಉದ್ಯೋಗಗಳ ನೇಮಕಾತಿಯು ಯಾವಾಗಲೂ ಅಧಿಸೂಚನೆಯಲ್ಲಿ (Notification) ಪ್ರಕಟಿಸಲಾದ ನಿಯಮಗಳನ್ನು ಮಾತ್ರ ಅನುಸರಿಸಬೇಕು ಎಂದು ಕೋರ್ಟ್ ತನ್ನ ಹಳೆಯ ತೀರ್ಪನ್ನು ಉಲ್ಲೇಖಿಸಿದೆ. ಉನ್ನತ ವಿದ್ಯಾರ್ಹತೆಯನ್ನು ಹೊಂದಿದ್ದ ತಕ್ಷಣ, ಕಡಿಮೆ ವಿದ್ಯಾರ್ಹತೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಹಕ್ಕು ಯಾರಿಗೂ ಸಿಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.



source https://suddione.com/shocking-news-for-the-unemployed-supreme-courts-important-verdict-on-employment-qualifications/

Post a Comment

0 Comments