
ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಕ್ಷ’ (Cockroach Janata Party) ಎಂಬ ಇನ್ಸ್ಟಾಗ್ರಾಂ ಖಾತೆ ಈಗ ದೇಶದ ರಾಜಕೀಯ ಹಾಗೂ ಡಿಜಿಟಲ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರಂಭವಾದ ಕೆಲವೇ ದಿನಗಳಲ್ಲಿ ಕೋಟ್ಯಾಂತರ ಫಾಲೋವರ್ಸ್ಗಳನ್ನು ಸೆಳೆಯುವ ಮೂಲಕ ಈ ಪೇಜ್ ರಾಷ್ಟ್ರೀಯ ಪಕ್ಷಗಳ ಅಧಿಕೃತ ಖಾತೆಗಳನ್ನೇ ಸವಾಲು ಹಾಕುವ ಮಟ್ಟಕ್ಕೆ ಬೆಳೆದಿದೆ.
@cockroachjantaparty ಹೆಸರಿನ ಇನ್ಸ್ಟಾಗ್ರಾಂ ಖಾತೆ ಕೇವಲ ನಾಲ್ಕು ದಿನಗಳಲ್ಲೇ 10 ಮಿಲಿಯನ್ಗಿಂತ ಅಧಿಕ ಫಾಲೋವರ್ಸ್ ಪಡೆದುಕೊಂಡಿದ್ದು, ಪ್ರಸ್ತುತ ಈ ಸಂಖ್ಯೆ 10.6 ಮಿಲಿಯನ್ ದಾಟಿದೆ. ಇದರೊಂದಿಗೆ ಬಿಜೆಪಿಯ ಅಧಿಕೃತ Instagram ಖಾತೆ (@bjp4india) ಹೊಂದಿರುವ ಸುಮಾರು 8.7 ಮಿಲಿಯನ್ ಫಾಲೋವರ್ಸ್ ಸಂಖ್ಯೆಯನ್ನು ಈ ಪೇಜ್ ಹಿಂದಿಕ್ಕಿದೆ. ಕಾಂಗ್ರೆಸ್ನ ಅಧಿಕೃತ ಖಾತೆ ಸುಮಾರು 13.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಆಮ್ ಆದ್ಮಿ ಪಕ್ಷದ ಖಾತೆ ಸುಮಾರು 1.9 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದೆ.
ಏನಿದು ‘ಕಾಕ್ರೋಚ್ ಜನತಾ ಪಕ್ಷ’?
ಈ ಅಭಿಯಾನದ ಹುಟ್ಟು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯಿಂದ ಆರಂಭವಾಗಿದೆ ಎನ್ನಲಾಗುತ್ತಿದೆ. ನಿರುದ್ಯೋಗಿ ಯುವಕರ ಕುರಿತು ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ “ಕೆಲವರು ಜಿರಳೆಗಳಂತೆ ವರ್ತಿಸುತ್ತಿದ್ದಾರೆ” ಎಂಬ ಅರ್ಥದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಹೇಳಿಕೆಯನ್ನು ವ್ಯಂಗ್ಯಾತ್ಮಕವಾಗಿ ಸ್ವೀಕರಿಸಿದ ಯುವಕರು ಮೊದಲು ಎಕ್ಸ್ (Twitter) ನಲ್ಲಿ “Cockroach Janata Party” ಎಂಬ ಹೆಸರಿನಲ್ಲಿ ಕಾಮೆಂಟ್ಗಳನ್ನು ಹಾಕಲು ಆರಂಭಿಸಿದರು.
ಅದಾದ ಮರುದಿನವೇ ಇದೇ ಹೆಸರಿನಲ್ಲಿ Instagram ಖಾತೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಯುವಕರು ಈ ಪೇಜ್ನ್ನು ಫಾಲೋ ಮಾಡಲು ಆರಂಭಿಸಿದರು. ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ಫಾಲೋವರ್ಸ್ಗಳನ್ನು ಗಳಿಸಿದ್ದ ಈ ಖಾತೆ, ಈಗ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದಿ ಡಿಜಿಟಲ್ ದಾಖಲೆ ನಿರ್ಮಿಸಿದೆ.
ಯುವಕರ ಸಮಸ್ಯೆಗಳಿಗೆ ಹೊಸ ಧ್ವನಿ
ಈ ಪೇಜ್ ತನ್ನನ್ನು “ಯುವಕರಿಂದ, ಯುವಕರಿಗಾಗಿ ಮತ್ತು ಯುವಕರ ಪರ ರಾಜಕೀಯ ವೇದಿಕೆ” ಎಂದು ಪರಿಚಯಿಸಿಕೊಂಡಿದೆ. ನಿರುದ್ಯೋಗ, ಪ್ರಶ್ನೆ ಪತ್ರಿಕೆ ಸೋರಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ, ರಾಜಕೀಯ ಹೊಣೆಗಾರಿಕೆ, ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳು ಹಾಗೂ ಉದ್ಯೋಗದ ಕೊರತೆ ಕುರಿತ ಪೋಸ್ಟ್ಗಳು ಇಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ.
ಇಲ್ಲಿಯವರೆಗೆ ಕೇವಲ 50ಕ್ಕೂ ಹೆಚ್ಚು ಪೋಸ್ಟ್ಗಳನ್ನು ಮಾತ್ರ ಮಾಡಿದ್ದರೂ, ಪ್ರತಿಯೊಂದು ಪೋಸ್ಟ್ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್ಗಳನ್ನು ಪಡೆಯುತ್ತಿದೆ. “ಯುವಕರ ಶಕ್ತಿಯನ್ನು ಅಂಡರ್ಎಸ್ಟಿಮೇಟ್ ಮಾಡಬೇಡಿ” ಎಂಬ ಕಾಮೆಂಟ್ಗಳು ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿವೆ.
ಸೂರ್ಯಕಾಂತ್ ಹೇಳಿಕೆ ಏನು?
ವಕೀಲರೊಬ್ಬರು ಹಿರಿಯ ವಕೀಲರ ಸ್ಥಾನಮಾನ ನೀಡದಿರುವ ಬಗ್ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ ವೇಳೆ ಸುಪ್ರೀಂಕೋರ್ಟ್ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ವ್ಯವಸ್ಥೆಯ ಮೇಲೆ ದಾಳಿ ಮಾಡುವ ಕೆಲ ಪರಾವಲಂಬಿಗಳು ಇದ್ದಾರೆ. ಕೆಲ ನಿರುದ್ಯೋಗಿ ಯುವಕರು ಜಿರಳೆಗಳಂತೆ ವರ್ತಿಸುತ್ತಿದ್ದಾರೆ” ಎಂದು ಹೇಳಿದ್ದರು ಎನ್ನಲಾಗಿದೆ. ಇದೇ ಹೇಳಿಕೆ ನಂತರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವ್ಯಂಗ್ಯದ ಹೊಸ ಟ್ರೆಂಡ್
ಈಗ “ಕಾಕ್ರೋಚ್ ಜನತಾ ಪಕ್ಷ” ಕೇವಲ ಮೀಮ್ ಪೇಜ್ ಆಗಿ ಉಳಿದಿಲ್ಲ. ಇದು ಯುವಕರ ಅಸಮಾಧಾನ, ನಿರುದ್ಯೋಗದ ಬೇಸರ ಮತ್ತು ವ್ಯವಸ್ಥೆಯ ವಿರುದ್ಧದ ಡಿಜಿಟಲ್ ಪ್ರತಿಭಟನೆಯ ರೂಪ ಪಡೆದಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳಿಗೆ ಸವಾಲು ಹಾಕುವ ಮಟ್ಟಿಗೆ ಬೆಳೆದಿರುವ ಈ ಪೇಜ್ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.









source https://suddione.com/from-cockroach-comment-to-janata-party-the-digital-revolution-of-youth-on-instagram/

0 Comments
If u have any queries, Please let us know