ಬಾರ್ಗಿ ಅಣೆಕಟ್ಟಿನಲ್ಲಿ ಭೀಕರ ದೋಣಿ ದುರಂತ: 9 ಮಂದಿ ಸಾವು

ಹಠಾತ್‌ ಬಿರುಗಾಳಿಯ ಪರಿಣಾಮ ಮಧ್ಯಪ್ರದೇಶದ ಜಬಲ್ಪುರದಲ್ಲಿ ಭೀಕರ ದೋಣಿ ಅಪಘಾತ ಸಂಭವಿಸಿದ್ದು, ಬಾರ್ಗಿ ಅಣೆಕಟ್ಟು ಜಲಾಶಯದಲ್ಲಿ 29 ಪ್ರಯಾಣಿಕರಿದ್ದ ಕ್ರೂಸ್ ದೋಣಿ ಮಗುಚಿ 9 ಮಂದಿ ಮೃತಪಟ್ಟಿದ್ದಾರೆ.ಗುರುವಾರ ಪ್ರವಾಸಿಗರು ನರ್ಮದಾ ನದಿಯ ಬಾರ್ಗಿ ಜಲಾಶಯದಲ್ಲಿ ಕ್ರೂಸ್ ಸವಾರಿ ಮಾಡುತ್ತಿದ್ದಾಗ ಏಕಾಏಕಿ ಹವಾಮಾನ ಬದಲಾಗಿ ಭಾರೀ ಗಾಳಿ ಬೀಸಿತು. ಇದರಿಂದ ದೋಣಿ ನಿಯಂತ್ರಣ ತಪ್ಪಿ ಮಗುಚಿಬಿದ್ದಿದ್ದು, ಪ್ರಯಾಣಿಕರು ನೀರಿಗೆ ಬೀಳಿದರು.

ಘಟನೆಯ ಕುರಿತು ಬದುಕುಳಿದ ಪ್ರವಾಸಿಗ ಸಂಗೀತಾ ಕೋರಿ ಮಾತನಾಡಿ, ಆರಂಭದಲ್ಲೇ ಪ್ರಯಾಣಿಕರಿಗೆ ಸುರಕ್ಷತಾ ಲೈಫ್ ಜಾಕೆಟ್‌ಗಳನ್ನು ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ. ಗಾಳಿ ಜೋರಾಗುತ್ತಿದ್ದಂತೆ ದೋಣಿಯೊಳಗೆ ನೀರು ನುಗ್ಗಲು ಆರಂಭವಾಗಿದ್ದು, ಆತುರದಲ್ಲಿ ಜಾಕೆಟ್‌ಗಳನ್ನು ಹಂಚಲು ಯತ್ನಿಸಿದರೂ, ಅಷ್ಟರಲ್ಲೇ ದೋಣಿ ಮಗುಚಿಬಿದ್ದಿತು ಎಂದು ತಿಳಿಸಿದ್ದಾರೆ.ಇನ್ನೂ, ಸ್ಥಳೀಯರು ದೋಣಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸೂಚಿಸಿದ್ದರೂ, ಪೈಲಟ್ ಗಮನ ಹರಿಸದೆ ಮುಂದುವರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹವಾಮಾನ ಇಲಾಖೆಯು 40-50 ಕಿ.ಮೀ ವೇಗದ ಗಾಳಿ ಬೀಸುವ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ, ಅದನ್ನು ನಿರ್ಲಕ್ಷಿಸಿ ಕ್ರೂಸ್‌ಗೆ ಅನುಮತಿ ನೀಡಿರುವುದು ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಘಟನೆಯ ಬಳಿಕ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, 22 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಇನ್ನೂ ಹಲವರು ಕಾಣೆಯಾಗಿರುವ ಶಂಕೆ ಇದೆ. ಸುಮಾರು 20 ಮೀಟರ್ ಆಳದಲ್ಲಿ ಮುಳುಗಿದ ದೋಣಿ, ಅಣೆಕಟ್ಟಿನ ದಡದಿಂದ ಸುಮಾರು 300 ಮೀಟರ್ ದೂರದಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.



source https://suddione.com/9-dead-in-horrific-boat-accident-at-bargi-dam/

Post a Comment

0 Comments