
ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 05 : ಬಿ.ಇ.ಡಿ. ಎನ್ನುವುದು ವಿದ್ಯಾರ್ಥಿ ಜೀವನದಿಂದ ಬದುಕಿನ ಜೀವನದ ಕಡೆಗೆ ಕೊಂಡೊಯ್ಯುವ ಪರಿವರ್ತನೆಯ ಹಂತ ಎಂದು ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಸಿ.ಅನಂತರಾಮು ತಿಳಿಸಿದರು.
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
ಬಿ.ಇ.ಡಿ. ಶಿಕ್ಷಣ ಬದುಕು ಕಟ್ಟಿಕೊಡುವ ಶಿಕ್ಷಣವಾಗಬೇಕೆ ವಿನಃ ಶೋಕಿಯಾಗಬಾರದು. ಮನೆಯಲ್ಲಿ ತಂದೆ-ತಾಯಿ, ಗುರು-ಹಿರಿಯರಲ್ಲಿ ಉತ್ತಮ ಬಾಂಧವ್ಯ ಬೆಸೆಯುವಂತ ಶಿಕ್ಷಣ ಮಕ್ಕಳಿಗೆ ಕಲಿಸಬೇಕಿದೆ. ಸಧೃಡ ಸಮಾಜ ನಿರ್ಮಿಸುವುದೇ ಶಿಕ್ಷಕರ ಪರಮ ಧ್ಯೇಯವಾಗಬೇಕು. ಇದರ ಮುಂದೆ ಎಲ್ಲವೂ ಗೌಣ. ಮಾನವೀಯತೆ ಸತ್ಯ, ನಿಷ್ಠೆ, ಶ್ರದ್ದೆ, ಕಠಿಣ ಪರಿಶ್ರಮವಿದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ಜಿ.ಇ.ಭೈರಸಿದ್ದಪ್ಪ ಮಾತನಾಡಿ ಶಿಕ್ಷಕ ಒಬ್ಬ ನಟ, ಕಲಾವಿದ. ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕನಿಗೆ ಕಲೆ ಅತ್ಯಗತ್ಯವಾಗಿ ಬೇಕು. ಅನೇಕ ವಿಚಾರಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟಿಸಬೇಕಾದರೆ ಶಿಕ್ಷಕ ಸಕಲ ಕಲಾ ವಲ್ಲಭನಾಗಿರಬೇಕು. ಕಲೆ ಇದ್ದವರು ಮಾತ್ರ ಅತ್ಯುತ್ತಮವಾಗಿ ಬೋಧಿಸಲು ಸಾಧ್ಯ ಎಂದರು.
ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ, ಕೌಶಲ್ಯವಿರುತ್ತದೆ. ಆದರೆ ತಮ್ಮಲ್ಲಿರುವ ಜ್ಞಾನವನ್ನು ಹೇಗೆ ಮತ್ತೊಬ್ಬರಿಗೆ ತಲುಪಿಸಬೇಕೆನ್ನುವ ಚಾಣಾಕ್ಷತನ ಮುಖ್ಯ. ಪ್ರತಿಭೆಯಿದ್ದು, ಪ್ರಯತ್ನವಿಲ್ಲದಿದ್ದರೆ ಜೀವನದಲ್ಲಿ ಯಶಸ್ಸು ಗಳಿಸುವುದು ಕಷ್ಟ. ನಿರಂತರ ಅಧ್ಯಯನದಿಂದ ಉತ್ತಮ ಶಿಕ್ಷಕನಾಗಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿ ಕೂರಬಾರದು ಎಂದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್.ಎಲ್.ವಿ. ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಡಾ.ಎಂ.ಎಂ.ಮಹಾಂತೇಶ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಕೆ.ಪಿ.ನಾಗಭೂಷಣಶೆಟ್ಟಿ, ಪ್ರೊ.ಆರ್.ಎಸ್. ರಾಜು, ಪ್ರೊ.ವಿ.ಪ್ರಕಾಶ್, ಡಾ.ಜಿ.ಬಿ.ರಾಜಪ್ಪ, ಡಾ.ಬಿ.ಚಂದ್ರಪ್ಪ, ಡಾ.ಲಿಂಗರಾಜ್ ಆರ್.ಹಂಚಿನಮನಿ, ಗ್ರಂಥಪಾಲಕ ಬಸವರಾಜು, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎಂ.ವಿ.ಗೋವಿಂದರಾಜು, ಸುಶ್ಮ, ಆಯಿಷಾ ಮುಸ್ಕಾನ್ ಇವರುಗಳು ವೇದಿಕೆಯಲ್ಲಿದ್ದರು.
ಬಿ.ಇ.ಡಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಪಲ್ಲವಿ, ಕಾಂಚನ, ನಿಖಿತ ಇವರುಗಳನ್ನು ಸನ್ಮಾನಿಸಲಾಯಿತು.
[Collection]
0 Comments
If u have any queries, Please let us know